೨೦೧೪-ಭಜರಂಗಿ, ೨೦೧೫-ವಜ್ರಕಾಯ, ೨೦೧೬-ಕಿಲ್ಲಿಂಗ್ ವೀರಪ್ಪನ್, ಶಿವಲಿಂಗ ಚಿತ್ರಗಳು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ಗೆ ಮತ್ತೋಮ್ಮೆ ಸ್ಟಾರ್ಪಟ್ಟ ತಂದುಕೊಟ್ಟಿದೆ. ನಾಲ್ಕು ಚಿತ್ರದ ಪಾತ್ರಗಳು ಭಿನ್ನವಾಗಿರುವುದರಿಂದ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ ನಿರ್ಮಾಪಕರುಗಳು ಚಿತ್ರದ ಸಕ್ಸಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ. ಈಗ ಅಭಿಮಾನಿಗಳು ಎಲ್ಲಾ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಇತ್ತೀಚೆಗೆ ಪ್ರಸನ್ನ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಆಚರಿಸಿಕೊಂಡರು. ಅಣ್ಣನ ಕಾರ್ಯಕ್ರಮದಲ್ಲಿ ಪುನೀತ್ರಾಜ್ಕುಮಾರ್ ಆಗಿಮಿಸಿ ಈ ರೀತಿ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರವು ೫೦ ದಿನ ಪ್ರದರ್ಶನವಾಗುವುದು ವಿರಳವಾಗಿದೆ. ಅಂತಹದರಲ್ಲಿ ಶಿವಲಿಂಗ ೫೦ ದಿನ ಪೂರೈಸಿ ಮುನ್ನೆಡೆಯುತ್ತಿರುವುದು ಸಂತಸ ತಂದಿದೆ. ಈ ವಯಸ್ಸಿನಲ್ಲೂ ಯುವಕರಂತೆ ನೃತ್ಯ, ಫೈಟ್ ಮಾಢುತ್ತಿದ್ದಾರೆ. ಇವರಿಂದ ಕಲಿಯಬೇಕಾದುದು ಸಾಕಷ್ಟು ಇದೆ. ದೇವರು ಯಶಸ್ಸು, ಆರೋಗ್ಯ ನೀಡಲಿ ಎಂದರು. ಸಾರಾಗೋವಿಂದು ತಮ್ಮ ಮಾತಿನಲ್ಲಿ ಡಾ.ರಾಜ್ರಂತೆ ಒಂದರ ನಂತರ ಹಿಟ್ ನೀಡುತ್ತಲೆ ಇದ್ದಾರೆ. ಇಂತಹ ನಟರು ಇರುವುದರಿಂದಲೆ ಚಂದನವನಕ್ಕೆ ಮೌಲ್ಯ ಬಂದಿದೆ ಎನ್ನುತ್ತಾರೆ.
ನಿರ್ಮಾಪಕ ಸಂಘದ ಅಧ್ಯಕ್ಷ,ಶಾಸಕ ಮುನಿರತ್ನಂ, ನಿರ್ದೇಶಕ ಪಿ.ವಾಸು, ರಾಕ್ಲೈನ್ವೆಂಕಟೇಶ್ ಇವರುಗಳು ಶಿವಣ್ಣರನ್ನು ಗುಣಗಾನ ಮಾಡಿ, ಕರ್ನಾಟಕ ಕಂಡ ಅದ್ಬುತ ನಟ, ಇನ್ನಷ್ಟು ಔನ್ನತ್ಯಕ್ಕೆ ಬೆಳೆಯಲಿ ಎಂದರು. ಸತತ ನಾಲ್ಕು ಚಿತ್ರಗಳನ್ನು ಗೆಲ್ಲಿಸುತ್ತಾ ಬಂದಿದ್ದೀರಾ. ಶಿವಲಿಂಗ ೧೦೦ ದಿನಗಳನ್ನು ಪೂರೈಸಲಿದೆ. ಅಭಿಮಾನಿಗಳ ಆಶಿರ್ವಾದದಿಂದ ಇಲ್ಲಿಯ ತನಕ ಬಂದಿರುವೆ. ಎಲ್ಲಾ ಕನ್ನಡ ಚಿತ್ರಗಳು ಚೆನ್ನಾಗಿ ಓಡಬೇಕು. ಸುರೇಶ್ ನಿರ್ಮಾಣದಲ್ಲಿ ಖದರ್ ಮತ್ತು ಶಿವಲಿಂಗ-೨ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ನಿಮ್ಮನ್ನು ಖುಷಿಪಡಿಸುವುದು ನನ್ನ ಧ್ಯೇಯ ಅಂತ ಶಿವಣ್ಣ ಮಾತನಾಡುವಾಗ ಶಿಳ್ಳೆ, ಚಪ್ಪಾಳೆ ಸದ್ದು ಕೇಳಿಬಂದವು. ಪತ್ನಿ ಗೀತಾಶಿವರಾಜ್ಕುಮಾರ್, ಶಿವಲಿಂಗ ನಿರ್ಮಾಪಕ ಸುರೇಶ್ ಉಪಸ್ತಿತರಿದ್ದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಭಾರಿ ಹೂವಿನ ಹಾರ, ಪಾರಿತೋಷಕ ನೀಡಿ ದಂಪತಿಗಳನ್ನು ಸನ್ಮಾನಿಸಿದರು.